ಮಂಗಳೂರು, ಜನವರಿ 6: ಪ್ರೇಕ್ಷಕ ಗಣದಲ್ಲಿ ಮುಸ್ಲಿಮರು ಕುಳಿತಿದ್ದರೆ ವೇದಿಕೆಯ ಮೇಲೆ ಪ್ರತಿಭೆಯನ್ನು ಪ್ರದರ್ಶಿಸಲು ಅಡ್ಡಿಯಾಗುತ್ತದೆಯೇ? ಆದರೆ ಮದ್ಯದ ಅಮಲಿನಲ್ಲಿದ್ದ ಬಜರಂಗದಳದ ಕಾರ್ಯಕರ್ತರ ಪ್ರಕಾರ ಇದು ಸರಿ.
ನಗರದ ಕುರ್ನಾಡಿನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪ್ರದರ್ಶನ ನಡೆಯುತ್ತಿದ್ದ ವೇಳೆ ಅಮಲಿನಲ್ಲಿದ್ದ ಆರು ಭಜರಂಗದಳದ ಕಾರ್ಯಕರ್ತರು ವೇದಿಕೆ ಹತ್ತಿ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ.
ಪ್ರೇಕ್ಷಕಗಣದಲ್ಲಿ ಹಲವು ಮುಸ್ಲಿಂ ಯುವಕರು ಕುಳಿತಿದ್ದು ಅವರೆದುರು ಹಿಂದೂ ಯುವತಿಯರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಿಲ್ಲ ಎಂಬುದೇ ಬಜರಂಗಿಗಳ ಆಕ್ಷೇಪಣೆಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ ಕಾಮತ್ ತಿಳಿಸಿದ್ದಾರೆ. ಸುಮಾರು ಮೂವತ್ತು ನಿಮಿಷಗಳ ಮಾತಿನ ಚಕಮಕಿಯ ಬಳಿಕ ಬಜರಂಗಿಗಳು ಹಿಂದೂ ಯುವತಿಯರ ಪ್ರದರ್ಶನಕ್ಕೆ ಯಾವುದೇ ಮುಸ್ಲಿಂ ಯುವಕರು ಚಪ್ಪಾಳೆ ಹೊಡೆಯದಂತೆ ಆಗ್ರಹಿಸಿದರು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಕಾರ್ಯಕರ್ತರು ವೇದಿಕೆಯ ಧ್ವನಿವರ್ಧಕ ಮತ್ತು ಬೆಳಕಿನ ವ್ಯವಸ್ಥೆಯನ್ನೂ ಸಂಪರ್ಕದಿಂದ ಕಿತ್ತುಹಾಕಿ ವೇದಿಕೆ ಕತ್ತಲಿನಲ್ಲಿ ಮುಳುಗುವಂತೆ ಮಾಡಿದ್ದರು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಈ ದುರ್ವರ್ತನೆಯ ವಿರುದ್ದ ಆರೂ ಜನರ ಮೇಲೆ ಕೊಣಾಜೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸ್ಥಳೀಯ ಪೋಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವರು ಎಂದು ಮಂಗಳೂರು ಸುಪರಿಂಟೆಂಡೆಂಟ್ ಆಫ್ ಪೋಲೀಸ್ ಎ.ಎಸ್. ರಾವ್ ಆಶ್ವಾಸನೆ ನೀಡಿದ್ದಾರೆ.